
"ಮಲೆಸೀಮೆಯಲ್ಲಿ ಈ ಪಾಟಿ ಬಿಸಿಲು ಕಂಡಿದ್ದೇ ಇಲ್ಲಾ ಭಟ್ಟರೇ, ಎಲ್ಲಿಗಾದ್ರೂ ಹೊಗುವ ಬಂದ್ರೆ ರಣಬಿಸಿಲು ನೆತ್ತಿ ಸುಡುತ್ತೆ ?" , ಮನೆ ಮುಂದಿನ ಚಿಟ್ಟೆಯಲ್ಲಿ ವಿರಮಿಸಿದ್ದ ಮೇಗಿನ ಗದ್ದೆ ರಾಮಣ್ಣ, ಅಣ್ಣ(ಅಪ್ಪಯ್ಯ)ನ ಜೊತೆ ಹರಟುತ್ತಿದ್ದ. ಅವನ ಮಾತಿಗೆ ಗೌಣುಹಾಕುತ್ತಾ ನನ್ನೆಡೆ ತಿರುಗಿದರು. ಅದು ರಾಮನಿಗೆ ಕಾಫಿ ಸಮಾರಾಧನೆ ಅಣಿ ಮಾಡು ಎನ್ನುವ ಸೂಚನೆ. ನಾನು ಒಳನಡೆದೆ. ಇಬ್ಬರೂ ಮಟ ಮಟ ಮಧ್ಯಾಹ್ನ ಕಾಫಿ ಹೀರಿ ಮತ್ತೆ ಮಾತಲ್ಲೆ ಊಟ ಮುಗಿಸಿದ್ದರು. ರಾಮಣ್ಣನಿಗೆ ಬೇಸಿಗೆಯಲ್ಲಿ ಸಾಮಾನ್ಯವಾಗಿ ಓಡಾಟ ಹೆಚ್ಚು, ಅದೂ ಯುಗಾದಿ ನಂತರ ಸುಮಾರು ಶುಭ ಸಮಾರಂಭಗಳಿಗೆ ಹೇಳಿಕೆ ನೀಡುವುದು. ಚಪ್ಪರ ಹಾಕುವುದು, ಮಂಟಪ ಮಾಡುವುದರಿಂದ ಹಿಡಿದು ಎಲ್ಲಾ ಕೆಲ್ಸಗಳಲ್ಲಿ ವ್ಯಸ್ತನಾಗಿರುತ್ತಿದ್ದ.
ಹೀಗೆ ಸದಾ ಚಟುವಟಿಕೆಯ ಜೀವಿ ರಾಮಣ್ಣನಿಗೂ ಬಿಸಿಲಿನ ಝಳ ಈ ಬಾರಿ ಚುರುಕು ಮುಟ್ಟಿಸಿದ್ದಂತೂ ನಿಜ. ಚಿಕ್ಕಂದಿನಿಂದ ಆತನನ್ನು ನಾವೆಲ್ಲಾ ರಾಮಣ್ಣ ಅಂತೆಲೆ ಕರೆಯೋದು. ಆದ್ರೆ ಆತನಿಗೆ ಏನಿಲ್ಲಾ ಅಂದ್ರೂ 45-50 ರ ಪ್ರಾಯ ಇರಬಹುದು ಅಥವಾ ಅದಕ್ಕಿಂತ ಹೆಚ್ಚಿರಬಹುದು. ಆದ್ರೆ ಆತನ ಚುರುಕುತನ ನಮ್ಮ ವಯಸ್ಸಿನವರಿಗೂ ಇಲ್ಲ. ಎಣ್ಣೆಗಂಪು ಬಣ್ಣದ ರಾಮಪ್ಪನ ಆಸ್ತಿ ಎಂದೂ ಮಾಸದ ಮುಗ್ಧ ನಗು. ಎರಡು ಕಿವಿಗೂ ಒಂಟಿ ಧರಿಸಿ, ಸದಾ ಅದೇ ಮಾಸಿದ ಬಿಳಿ ಅಂಗಿ ಮೊಳಕಾಲಿಗಿಂತ ಮೇಲೆ ಉಟ್ಟ ಕಚ್ಚೆ ಪಂಚೆ. ಕೈಲಿ ಎಂದಿನಂತೆ ಕರಿ ಬಣ್ಣದ ಛತ್ರಿ. ಹೊಗೆಸೊಪ್ಪು ಹೊಸೆಯುತ್ತಾ ಗೊಟಡಿಕೆ ಮೆಲ್ಲುತ್ತಾ ಶೃಂಗೇರಿ, ಮೂಡಿಗೆರೆ, ಕೊಪ್ಪ, ಬಾಳೆಹೊನ್ನೂರು, ಶಿವಮೊಗ್ಗ.... ಸೀಮೆಯ ವಕ್ತಾರನಂತೆ ಸದಾ ಓಡಾಡುವ ಇವನನ್ನು ನೋಡದವರೆ ವಿರಳ. ಸಹಕಾರ ಸಾರಿಗೆ, ನಿಸ್ಮಿತಾ, ಮಲ್ಲಿಕಾರ್ಜುನ, ಕೆಕೆಬಿ, ತುಂಗಭದ್ರಾ. ಅವಿಭಜಿತ ಶಂಕರ್ ಟ್ರಾನ್ಸ್ ಪೋರ್ಟ್ ಹೀಗೆ ಎಲ್ಲಾ ವಾಹನದಲ್ಲೂ ಡ್ರೈವರ್ ಪಕ್ಕದ ಬದಿ ಸೀಟು ಖಾಯಂ.
ಸಾಮಾನ್ಯವಾಗಿ ರಾಮಣ್ಣ ಬಸ್ ಸ್ಪಾಪ್ ಗಳಲ್ಲಿ ನಿಂತು, ಬಸ್ ಕಾಯ್ದು ಹತ್ತುತ್ತಿದ್ದದ್ದೆ ಕಮ್ಮಿ. ಮೊದಮೊದಲೆಲ್ಲಾ ಇವನು ಕೈ ಒಡ್ಡಿದ ಕಡೆಯೆಲ್ಲಾ ಬಸ್ ನಿಲ್ಲಿಸುತ್ತಿದ್ದ ಡ್ರೈವರ್ ಗಳು, ಬರಬರುತ್ತಾ ಇವನ ಕಡೆ ಉದಾಸೀನರಾಗುತ್ತಾ ಬಸ್ ಹಾಗೆ ಹೊಡೆದುಕೊಂಡು ಹೋಗತೊಡಗಿದರು. ಆದ್ರೆ ಇವ ಬಿಡಬೇಕಲ್ಲ. ತಿಂಗಳ ಕೆಳಗೆ ಜೈಪುರದಿಂದ ಮುಂದೆ ಕಲ್ಕೆರೆಗೂ ಮುನ್ನ ಸಾಮಾನ್ಯವಾಗಿ ಕೈ ಒಡ್ಡಿ ಬಸ್ ನಿಲ್ಲಿಸುತ್ತಿದ್ದ ರಾಮಣ್ಣ, ಮುಷ್ಟಿಯಲ್ಲಿ ಕಲ್ಲು ಹಿಡಿದು ಗಣ ಬಂದ ಹಾಗೆ ಆಡುತ್ತಾ ಬಸ್ ಗೆ ಅಡ್ಡವಾಗಿ ನಿಂತ್ತಿದ್ದನಂತೆ. ಡ್ರೈವರ್ ಬ್ರೇಕ್ ಒತ್ತಿದ್ದ ರಭಸಕ್ಕೆ ಹಲವರ ಮುಸುಡಿ, ಕಿವಿ ಮೂಗುಗಳು ಜಖಂ ಆಗಿದ್ದಂತೂ ಸತ್ಯ. ಆಮೇಲೆ ಏನೂ ಅರಿಯದವನಂತೆ ಮೆಲ್ಲಗೆ ಬಸ್ ಏರಿ ತನ್ನ ಸೀಟಿನಲ್ಲಿ ಕೂತ ರಾಮಣ್ಣನಿಗೆ ಕಂಡೆಕ್ಟರ್ ಬೈಗುಳ ಪುಷ್ಪವೃಷ್ಟಿಯಂತೆ ಅನಿಸಿ, ಎಂದಿನ ಪೆಕರು ನಗೆ ನಕ್ಕನಂತೆ. ಕಡೆಗೆ ಕಂಡೆಕ್ಟರ್ ಹಣೆ ಬಡಿದುಕೊಂಡು ಹೋದನಂತೆ. ಈ ಬಗ್ಗೆ ಅಣ್ಣ ಪ್ರಶ್ನಿಸಿ ಯಾಕೋ ರಾಮ ಹೀಗೆಲ್ಲಾ ಮಾಡಿದೆಯಂತೆ ಅಂದ್ರೆ, "ಅಯ್ಯೋ ಬಿಡಿ ಭಟ್ಟರೆ, ಹುಡುಗು ಮುಂಡೇವು. ಅವಕ್ಕೆನೂ ಗೊತ್ತು. ಅವರಪ್ಪನ ಕಾಲದಿಂದ ನಾನು ಬಸ್ ನಲ್ಲಿ ಓಡಾಡಿದ ಸರ್ವೀಸ್ ಇದೆ ನಂಗೆ. ಒಂಚೂರು ಮರ್ಯಾದೆ ಕೊಟ್ಟು ಅಭ್ಯಾಸ ಇಲ್ಲ ಈಗೀನಾ ಮುಂಡೆವಕ್ಕೆ" ಅನ್ನೋದೆ.
ರಾಮಣ್ಣನ್ನಂತವರು ನಮ್ಮ ಸೀಮೆಯಲ್ಲಿ ಹುಡುಕಿದರೆ ನೂರು ಮಂದಿ ಸಿಗುತ್ತಾರೆ. ಆದ್ರೆ ಇತ್ತೀಚೆಗೆ ರಾಮಣ್ಣನಂಥಹ ಟಿಪಿಕಲ್ ಮಲೆನಾಡಿನ ಜೀವಿಗಳ ಬಗ್ಗೆ ಒಂದಷ್ಟು ಹೆಚ್ಚಿನ ಆಸ್ಥೆ ಮೂಡಿತ್ತು. ಅದಕ್ಕೆ ಕಾರಣ ಇಷ್ಟೆ. ತೇಜಸ್ವಿ ಅವರ ಕಣ್ಮರೆಯ ವಿಷಾದ ರಾಗ, ಮತ್ತೆ ಇಂಥಹ ಜನ ನೋಡಿ ಮೂಡುವ ಹುರುಪು. ಕಾಲ ಎಲ್ಲವನ್ನೂ ಮರೆಸುತ್ತದೆ ಅನ್ನೋ ಮಾತನ್ನು ಕಾಲ ಎಲ್ಲವನ್ನು ಜೀವಂತ ಇರಿಸುತ್ತದೆ. ಹೀಗಲ್ಲಾದಿದ್ದರೆ ಹಾಗೆ ಎಂದು ತಿದ್ದುಕೊಳ್ಳೋದು ವಾಸಿ ಅನಿಸುತ್ತದೆ.
ತೇಜಸ್ವಿ ಮರೆತರೆ ನಮ್ಮನ್ನು ನಾವು ಮರೆತಂತೆಅಕ್ಕಾ ಎಷ್ಟು ಚೆಂದಿತ್ತು ಗೊತ್ತಾ? ಮೇಷ್ಟ್ರು ಮೊದಲು ಹೇಳಿದಾಗ ನಾವು ಎಲ್ಲೋ ಇಲ್ಲಿ ಮನೆ ಹತ್ರಾ ಇರೋ ಕಾಡು ತರಾನೇ ಏನೋ ತೋರಿಸಿ ಕಳಿಸ್ತಾರೆ ಅಂತಾ ಮಾಡಿದ್ವಿ. ತೇಜಸ್ವಿ ಅಜ್ಜ ಓಡಾಡಿದ ಕಾಡಂತೆ ಕಣೆ. ಹೋಗ್ ನಿಂಗೆ ಪುಣ್ಯ ಇಲ್ಲ ಹೀಗೆ ಸಾಗಿತ್ತು ಪುಟ್ಟ ಪೋರಿಯ ಮಾತಿನ ಝರಿ..
ತೇಜಸ್ವಿ ಅವರ ನೆನಪಿನಲ್ಲಿ ಏ.5 ರಂದು ನಡೆದ ಚಾರಣ ಕಾರ್ಯಕ್ರಮಕ್ಕೆ ಹೋಗಿ ಬಂದ ಮೇಲೆ ವರ್ಷಿಣಿಯ ಸಂಭ್ರಮಕ್ಕೆ ಎಣೆಯಿಲ್ಲ. ಬರೀ ಮನೆ ಸುತ್ತಣ ಕಾಡಿನಲ್ಲಿ ನಮ್ಮ ಜೊತೆ ಅಲೆಯುತ್ತಾ ಇದ್ದ ಹುಡುಗಿಗೆ ಒಮ್ಮೇಲೆ ಹೊಸದಾದ ಸಿರಿ ಕಂಡ ಅನುಭವ. ಮೂಡಿಗೆರೆಯ ವಿಸ್ಮಯಾ ಟ್ರಸ್ಟ್ ನ ಚಾರಣ ಕಾರ್ಯಕ್ರಮಕ್ಕೆ ಗೆಳತಿಯರೊಡನೆ ನನ್ನ ಚಿಕ್ಕನ ಮಗಳು ೧೦ ವರ್ಷದ ವರ್ಷಿಣಿ ಅಲ್ಲಲ್ಲ ವಾಕ್ ವರ್ಷಿಣಿ(ಮಾತಿನ ಮಳೆಗೆರೆಯುವವಳು ಅಹಹ್ಹಹಹಾ) ಕೂಡ ಹೋಗಿದ್ದಳು. ಆರೋಗ್ಯ ಕೊಂಚ ಏರುಪೇರಾದ ಕಾರಣ ನೆಚ್ಚಿನ ಗುರು ತೇಜಸ್ವಿ ಅಲೆದಾಡಿದ ತಾಣಕ್ಕೆ ನಾನು ಹೋಗಲಾಗಲಿಲ್ಲ. ಆದರೆ, ವರ್ಷಿಣಿಯ ಮಾತು, ಸಂಭ್ರಮ ಆ ನೋವನ್ನು ಮರೆ ಮಾಡಿತು. ಅಲ್ಲಿ ಪುಟ್ಟ ಪೋರಿ ಪ್ರಕೃತಿಯ ಮಡಿಲಿನಲ್ಲಿ ವಿಜ್ಞಾನಿಗಳು, ಪರಿಸರವನ್ನು ತಿಳಿದವರು, ತೇಜಸ್ವಿ ಒಡನಾಡಿಗಳ ಜೊತೆ ಏನೆಲ್ಲಾ ಕಲಿತಿರಬಹುದು. ಚಾರಣ ಮಾಡಿ, ದಿನ ನೋಡೊ ಗಿಡ ಮರ ಆದ್ರೂ ವೈಜ್ಞಾನಿಕ ದೃಷ್ಟಿಯಿಂದ ಅವುಗಳ ಬಗ್ಗೆ ಇನ್ನಷ್ಟು ತಿಳಿದಾಗ ಆಗುವ ಸಂತೋಷ ವರ್ಣಿಸಲು ಬರುವುದಿಲ್ಲ.
ಯಾರೂ ಬೇಡ ತೇಜಸ್ವಿ ಅವರ ಜೀವಂತ ಪಾತ್ರ ಬಿರಿಯಾನಿ ಕರಿಯಪ್ಪನನ್ನು ನೋಡಿದರೆ ಸಾಕು ತೇಜಸ್ವಿ ಬರೆದ ಕಥೆಗಳು ನಮಗರಿವಿಲ್ಲದಂತೆ ಕಣ್ಮುಂದೆ ಬಂದು ನಿಲ್ಲುತ್ತದೆ. ತೇಜಸ್ವಿ ಅಗಲಿದ ನಂತರ ಅವರ ಬಗ್ಗೆ ಜನರಲ್ಲಿ ಮೂಡುತ್ತಿರುವ ಆಸಕ್ತಿ , ಆದರಗಳನ್ನು ಕಂಡರೆ ಖುಷಿಯಾಗುತ್ತದೆ. ಆದರೆ ಅದೇ ರೀತಿ ಒಂದಿಷ್ಟು ಭಯ ಕೂಡ ಆಗುತ್ತದೆ. ಯಾವ ನಿರ್ಜೀವ ಶಕ್ತಿಗೂ ನಿಲುಕದಂತಿದ್ದವರು ತೇಜಸ್ವಿ. ಆದರೆ ಎಲ್ಲಿ ನಮ್ಮ ಜನ ತೇಜಸ್ವಿ ಎಂಬ ಬ್ರಾಂಡ್ ನೇಮ್ ಇಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೋ ಎಂಬ ಅಳುಕು ಮನದ ಮೂಲೆಯಲ್ಲಿ ಕೊರೆಯುತ್ತಿದೆ. ಏನೇ ಆದರೂ ಪ್ರಕೃತಿಯಲ್ಲಿ ಸತ್ವವಿರುವುದಷ್ಟೇ ಉಳಿಯುವುದು. ಸರಳ ಜೀವಿಗೆ ಅಭಿಮಾನದ ಕಾಮನಬಿಲ್ಲು ಸುತ್ತಿ ಬೆಟ್ಟ ಮೇಲೆ ಕೂರಿಸಿ ಉತ್ಸವ ಮಾಡುವುದು ಅನಗತ್ಯ. ನಾವಂತೂ ನಿತ್ಯ ಕಾಯಕದಲ್ಲೇ ಮೂಡಿಗೆರೆ ಸಂತನನ್ನು ಕಾಣುತ್ತೇವೆ.
ಚಿತ್ರಗಳ ಕೃಪೆ: ದಟ್ಸ್ ಕನ್ನಡ

ಇರುಳು ಕಳೆದು ಕೋಟಿ ಚುಕ್ಕಿಗಳ ಬೆಳಕಿನಿಂದ
ಮನೆ ಮನ ಬೆಳಗಿರಲು,
ಒಂಟಿತಾರೆ ದಿನಕರನ ಸಾಂಗತ್ಯವೇಕೆ?
ಬರಡು ಭೂಮಿಗೆ ನೀರುಣಿಸಿ ಸಕಲ ಚರಾಚರಕ್ಕೆ
ಜೀವಜಲವಾಗಿಹ ತುಂಗೆ ಇರಲು,
ತನ್ನೊಡಲಲ್ಲಿ ನೂರು ತುಂಗೆಯಯರನ್ನುಳ್ಳ
ಕಡಲ ಹಂಬಲವೇಕೆ?
ಗೋಳಿಮರದಿ ಕೂತ ಪುಟ್ಟ ಮಡಿವಾಳ ಹಕ್ಕಿಯ
ಇನಿದನಿ ಇಂಪಾಗಿರೆ,
ದೂರದೂರಿನ ಕೋಗಿಲೆಯ ಸ್ವರ ಆಲಿಸುವಾಸೆಯೇಕೆ?
ಮೈಮನಕೆ ಮುದ ನೀಡುವ ಪ್ರೀತಿಯ ಗುಡಿಸಿರಲು
ಕಾಣದೂರ ಹಂಗಿನರಮನೆಯ ವೈಭೋಗವೇಕೆ?
ಒಡಲಾಳದಲ್ಲಿ ಆರದ ಜ್ಞಾನಜ್ವಾಲೆ ಆವರಿಸಲು
ಉಳಿದ ಕಾಮತೃಷೆಯೇಕೆ?
ಮಲೆನಾಡಿನ ಮಗಳಾಗೆ ನಾ ಇರುವೆ, ನನ್ನ ಅಳಿವು ಉಳಿವು
ಗೆಲುವು ಸೋಲು, ನೋವು ನಲಿವಿಗೆ
ಪಂಚಭೂತಗಳೇ ಸಾಕ್ಷಿಯಾಗಿರಲಿ
ಎಲ್ಲಕ್ಕೂ ಅವುಗಳ ನೆರವಿರಲಿ, ನನ್ನಿ ಪರಿಸರ ತೊರೆಯುವ ಮುನ್ನ
ನನ್ನ ಈ ಆಕೃತಿ ಪ್ರಕೃತಿಯೊಂದಿಗೆ ಲೀನವಾಗಿರಲಿ

ರಾಜು ಸಾವಿನ ಸುದ್ದಿ ಸುಳ್ಳಾಗಲಿ ಎಂದು ತಾಯಿ ಶಾರದೆಯ ಫೋಟೊ ನೋಡುತ್ತಾ ಬಹುಶಃ ಶನಿವಾರ ನಾನು ಕರೆ ಮಾಡಿದಾಗ ಎಲ್ಲರ ಬಾಯಲ್ಲೂ ಬರುತ್ತಿದ್ದದ್ದು ಒಂದೇ ವಾಕ್ಯ. "ಛೇ ಸಾವು ಬರಬಾರದಿತ್ತು. ಇದು ಸಾಯುವ ವಯಸ್ಸಲ್ಲ". ಬೆಂಗಳೂರಿನ ಮಿತ್ರರು ರಾಜು ಸಾವಿನ ಬಗ್ಗೆ ಹೇಳುತ್ತಿದ್ದರೆ, ಇತ್ತ ಕಣ್ಣಾಲಿಗಳು ತುಂಬಿ ಬಂದಿತ್ತು.
ರಾಜು ಅನಂತ ಸ್ವಾಮಿ s/o ಮೈಸೂರು ಅನಂತಸ್ವಾಮಿ(ದೊರೈ) ನನ್ನ ಗೆಳೆಯನಲ್ಲ, ಬಂಧುವಲ್ಲ, ನೆಂಟನಲ್ಲ, ಕನಿಷ್ಠ ಆತನನ್ನು ನೋಡಿರುವುದು ಒಂದೆರಡು ಬಾರಿ ಅಷ್ಟೇ. ಆದರೆ ಅವನ ಹಾಡಂತೆ 'ನೀ ನನ್ ಹಟ್ಟಿಗೆ ಬೆಳಕಾಗಿದ್ದೆ ರಾಜು. . .' ನಿತ್ಯ ತಂದೆ ಮಕ್ಕಳ ಗಾನಸುಧೆ ತುಂಗೆಯಂತೆ ನಮ್ಮ ಮನೆ ಮನದಲ್ಲಿ ಹರಿಯುತ್ತಿತ್ತು. ಆತನ ಕಂಠಸಿರಿ ಆತನನ್ನು ನನ್ನ ಆಪ್ತೇಷ್ಟರ ಸಾಲಿಗೆ ಸೇರಿಸಿತ್ತು. ಅದೆಷ್ಟೋ ಬಾರಿ ಮನನೊಂದಾಗ ರಾಜು ದನಿ ಕೇಳಿ ಸ್ವಯಂ ಸಾಂತ್ವನ ಹೇಳಿಕೊಂಡಿದ್ದು ಇದೆ.
ರಾಜು ಸಾವಿಗೆ ಕುಡಿತ ಒಂದು ಕಾರಣ ಅಷ್ಟೇ. ಆದರೆ ಇದು ಸ್ವಯಂಕೃತವೋ, ಸಹವಾಸ ದೋಷವೊ, ದುರ್ವಿಧಿಯೋ ಒಟ್ಟಿನಲ್ಲಿ ಆತನ ಸಾವು ಇಡೀ ಸಂಗೀತ ಲೋಕದ ದುರಂತಗಳಲ್ಲಿ ಒಂದು. ನನ್ನಂತಹ ಸಾಧಾರಣ ಅಭಿಮಾನಿಗಳಿಂದ ಹಿಡಿದು, ಆತನಿಂದ ಸಂಗೀತದ ಓನಾಮ ಕಲಿತ ಎಲ್ಲರ ಪಾಲಿಗೆ ಗುರುವಾಗಿ, ಹಸನ್ಮುಖಿ ಗೆಳೆಯನಾಗಿ ರಾಜು ಸದಾ ಸ್ಮರಣೀಯ. ಇಂದಿಗೂ ನಮ್ಮಡೆಯಲ್ಲಿ ಅತ್ರಿ ಸಾವಿನ ಸೂತಕ ಕಳೆದಿಲ್ಲ. ಆಗಲೇ ರಾಜು ಅಗಲಿಕೆ ಆಘಾತಕಾರಿಯಾಗಿದೆ. ಅದರಲ್ಲೂ ರಾಜು ಅವರ ತಾಯಿ, ಅಜ್ಜಿ ಈ ಆಘಾತವನ್ನು ಹೇಗೆ ಸಹಿಸುತ್ತಿದ್ದಾರೆ ಎಂದು ನೆನೆದರೆ ದೇವರ ಮೇಲೆ ಮುನಿಸಾಗುತ್ತದೆ. ರಾಜು ಬೆಳೆಸಿದ ಶಿಷ್ಯಂದಿರಲ್ಲಿ ಆತನ ಪ್ರತಿಭೆಯನ್ನು ಕಾಣುವ ಪ್ರಯತ್ನ ಪಡಬಹುದಾದರೂ, ಅನಂತಸ್ವಾಮಿ, ರಾಜು ಪರಂಪರೆ ಪೂರ್ಣವಾಗಿ ಇತಿಹಾಸದ ಪುಟ ಸೇರಲಿದೆ ಎಂಬ ಅರಗದ ಸತ್ಯ ಸದಾ ಕಾಡುತ್ತಿರುತ್ತದೆ. ಸಾವೇ ನೀನೇಷ್ಟು ಘೋರ...ನಿನಗಿದೋ ನನ್ನ ಧಿಕ್ಕಾರ...
ಕೆಲ ಎಸ್ಎಂಎಸ್ ಸಂದೇಶದ ಭಾಷಾಂತರ....
ಜೀವನವಾಗಿದೆ ಈಗ ಗಲೀಜಾದ ಕಾಗದ
ಉರಿಸಲಾರರು ಯಾರು ಇದನು ಯಾರು
ಬರೆಯಲಾರರು ಯಾರು ಇದರ ಮೇಲೆ
ಈ ರೀತಿಯ ಬದುಕು ನಂದಾಗಿದೆ
ಸತಾಯಿಸುವವರಿಲ್ಲ, ಓಲೈಸುವವರಿಲ್ಲ ನನ್ನ********************
ಅರಿಯದಂತೆ ಆಗಿಹೋದ ನೀ ಮನಕೆ
ಮೇಘಗಳ ನಡುವಲ್ಲಿ ನಸುಳಿ ಬಂದ ಸೌದಾಮಿನಿ
ಕಣ್ಣಹನಿಗಳೆರಡು ಉದುರುವ ಅಂತರದಲ್ಲಿ
ಬೀಸಿದ ಪ್ರಾಣವಾಯುವಿನ ತೆರದಿ
ಸುಳಿ ಸುಳಿದಾಡಿ,ಮನಕೆ ಮುದ ನೀಡಿ ನಲಿದಾಡಿ
ಮತ್ತೆ ಮತ್ತೆ ನೆನಪ ರಾಶಿ ಹೊತ್ತು ತರುವ ತಂಗಾಳಿ ನೀ
ಅರಿಯದಂತೆ ಆಗಿಹೋದ ನೀ ಮನಕೆ
ಕಾಯುವುದು ತರವೇ ನಿನಗೆ ನಾನು,
ಎಂದಿನಂತೆ ಬಾರದೇ ಹೋಗುವೆ ನೀನು
ಅರಿಯದಂತೆ ಆಗಿಹೋದ ನೀ ಮನಕೆ
ಪ್ರಶ್ನಾತೀತವಾಗಿ ಉಳಿದೆ ನನಗೆ
*********
ನನ್ನ ಇನಿಯ ತೊರೆದನು ನನ್ನ ಕೆಲ ಕ್ಷಣ
ದೂರಾಗಿ ಸನಿಹವಾದ ಎಂದಿತು ಮನ
ಅವನ ನೆನೆಯದೇ ಇರದ ಕ್ಷಣವೂ ಕ್ಷಣವಲ್ಲ
ಹೃದಯದಿ ನೆಲೆಸಿಹ ಅವನು ನನಗೆ ಕ್ಷಣಿಕವಲ್ಲ


ಮೋಜಿನ ಮಳೆ ನಿಂತು ಆಗಲೇ ನಾಲ್ಕೈದು ದಿನವಾಯ್ತು. ಆದರೆ ಈ ವಾರ ಅಂತಹ ಸಂಭ್ರಮವಿಲ್ಲ. ಮಧ್ಯದಲ್ಲಿ ಯುಗಾದಿ ಹಬ್ಬ , ಹೋಳಿಗೆ ಊಟ ಮೆದ್ದಿದ್ದು ಬಿಟ್ಟರೆ. ಬಾಕಿಯಂತೆ ಏ.೫ ರಿಂದ ಏ ೧೨ ರ ವರೆಗೂ ಮನಸ್ಸಿಗೆ ಇಬ್ಬರನ್ನು ನೆನೆಯದೇ ಇರಲು ಸಾಧ್ಯವಾಗುವುದಿಲ್ಲ. ನೆಚ್ಚಿನ ಗುರು, ಮಾರ್ಗದರ್ಶಿ ತೇಜಸ್ವಿ , ನಾಡಿನ ಸಾಂಸ್ಕೃತಿಕ ಸಂಕೇತ ಡಾ. ರಾಜ್ ಕುಮಾರ್.
ತೇಜಸ್ವಿ ನಿರುತ್ತರದಲ್ಲಿ ಕವಿದ ಮೋಡ ಚದುರಿ ಮಳೆ ಸುರಿಸಿ, ಹರುಷವನ್ನು ಅರಿಸಿ ಸಾಗುತ್ತಿದೆ. ರಾಜ್ ನೆನಪಿನಲ್ಲಿ ಸ್ಮಾರಕ ಎಂಬ ನೆಪದಲ್ಲಿ ರಾಜ್ ಅವರ ಕನಸುಗಳು ಕಮರುತ್ತಿದೆ. ಈ ಇಬ್ಬರು ಸರಳ ಜೀವಿಗಳು ಇಂದಿನವರ ಜಂಜಾಟವನ್ನು ನೋಡುತ್ತಿದ್ದರೆ ಖಂಡಿತಾ ಖಾರವಾಗಿ ಪ್ರತಿಕ್ರಿಯಿಸುತ್ತಿದ್ದರು ಎನಿಸುತ್ತದೆ. ಸ್ಮಾರಕ ನಿರ್ಮಾಣ, ಅರ್ಥವಿಲ್ಲದ ಆಚರಣೆಗೆ ತೇಜಸ್ವಿಯಂತೂ ವಿರೋಧಿಸುತ್ತಿದ್ದರು. ರಾಜ್ ಅವರು ಜೀವನದುದ್ದಕ್ಕೂ ಸರಳತೆಯನ್ನು ಮೈಗೂಡಿಕೊಂಡು ಬೆಳೆದವರು. ನಗರದಲ್ಲಿದ್ದರೂ ಸದಾ ಹಳ್ಳಿಮನೆಯ ವಾಸ್ತವ್ಯಕ್ಕಾಗಿ ಹಾತೊರೆಯುತ್ತಿದ್ದ ಜೀವ. ತೇಜಸ್ವಿ ನಿಸರ್ಗದ ರಮಣೀಯತೆಗೆ ಸೋತು, ಪ್ರಕೃತಿಯ ಮಡಿಲಲ್ಲಿ ಸಾಧನೆ, ಸಂಶೋಧನೆ ಮಾಡುತ್ತಾ, ಮುಗ್ಧ ಜನರೊಡನೆ ಬೆರೆತು ಸಾರ್ಥಕ ಬದುಕು ಬಾಳಿದವರು. ಈ ಎರಡು ಚೇತನಗಳಲ್ಲಿ ನಾನು ಇಷ್ಟಪಡುವುದು ಸರಳತೆ ಹಾಗೂ ಜೀವನ ಪ್ರೀತಿ, ಉತ್ಸಾಹ. ಇವರಿಬ್ಬರ ಚಿಂತನೆಗಳು ಸ್ಮಾರಕಕ್ಕೆ ಸೀಮಿತವಾಗದೇ ಅವರ ಸಾಧನೆ, ಜೀವನ ಪ್ರೀತಿ ಎಲ್ಲರಲ್ಲೂ ಆಸುಹೊಕ್ಕದರೆ ಎಷ್ಟು ಸುಂದರ. ಅದ್ಭುತ ಮಾಯಾಲೋಕದ ಕನಸು ಕಣ್ಮುಂದೆ ಕಾಣಿಸುತ್ತಿದೆ. ವಿರಮಿಸುತ್ತೇನೆ ಸದ್ಯಕ್ಕೆ.